Editorial
ನೂರು ಕೋಟಿ ಬಜೆಟ್ ನಿರ್ಮಾಪಕನನ್ನು ಅಭಿನಂದಿಸುವ ಯೋಗ ಶಿವಣ್ಣನಿಗೆ ಬರಲಿ!
-ರಾಜೇಶ್ ಗಣಪತಿ
ಸೆಂಚುರಿ ಶಿವಣ್ಣ ಇಪ್ಪತೈದು ವರ್ಷಗಳಿಂದ ತಮ್ಮ ಸಿನಿಮಾಗಳನ್ನು ನಿರ್ಮಿಸಿದ, ನಿರ್ದೇಶಿಸಿದವರನ್ನು ಅಭಿನಂದಿಸುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ‘ಆನಂದ’ ಸಿನಿಮಾದ ನಿರ್ದೇಶಕರಾದ ಸಿಂಗಿತಂ ಶ್ರಿನಿವಾಸ್ ರಿಂದ ನೂರನೇ ಸಿನಿಮಾದ ನಿರ್ದೇಶಕ-ನಿರ್ಮಾಪಕರಾದ ಪ್ರೇಮ್ ದಂಪತಿಗಳನ್ನು ಸನ್ಮಾನಿಸಿದನ್ನು ಶಿವಣ್ಣ ಮರೆಯಲಿಲ್ಲ. ಜೊತೆಗೆ ತಂತ್ರಜ್ಞರು, ನಾಯಕಿಯರು, ಹಿರಿಯ ಪತ್ರಕರ್ತರನ್ನು ಸನ್ಮಾನಿಸುವ ಮೂಲಕ ಈ ಕಾರ್ಯಕ್ರಮವನ್ನು ಅಂದವಾಗಿ ಸಂಘಟಿಸಿದ್ದರು ನಮ್ಮ ಶಿವಣ್ಣ.
ಹ್ಯಾಟ್ರಿಕ್ ಶಿವಣ್ಣನಿಗೆ ಹ್ಯಾಟ್ರಿಕ್ ಸಮಾರಂಭಗಳು ಒಂದರ ಹಿಂದೆ ಒಂದರಂತೆ ಬರುತ್ತಿವೆ. ಇನ್ನೇನು ತಿಂಗಳು ಕಳೆದರೆ ಮದುವೆಯಾಗಿಯು ಶಿವಣ್ಣ 25 ವರ್ಷ ಪೂರೈಸುತ್ತಾರೆ, ಅಷ್ಟರೊಳಗೆ ಜೋಗಯ್ಯ ಸದ್ದು ಮಾಡಲು ಪ್ರಾರಂಭಿಸುತ್ತದೆ. ಇಂದು ಸಹ ಡಜನ್ಗಟ್ಟಲೆ ಶಿವಣ್ಣನ ಸಿನಿಮಾ ನಿರ್ಮಿ ಸಲು ನಿರ್ಮಾಪಕರು ಸಾಲು- ಸಾಲಾಗಿ ನಿಂತಿದ್ದಾರೆ. ಕಳೆದ ಎರಡುವರೆ ದಶಕದಿಂದಲೂ ಶಿವರಾಜ್ ಕುಮಾರ್ ಸಿನಿಮಾ ನಿದರ್ೇಶಿಸಿ ಅಥವಾ ನಿರ್ಮಿಸಿದ ನಿರ್ಮಾಪಕರಿಗೆ ಚಿತ್ರರಂಗದಲ್ಲಿ ಗಟ್ಟಿನೆಲೆ ಗ್ಯಾರಂಟಿಯಗಿದ್ದು ಬಹಳಷ್ಟು ಜನರಲ್ಲಿ ನಾವು ಕಂಡಿದ್ದೇವೆ. ಕೆಲವರು ಸಿಕ್ಕ ಅವಕಾಶವನ್ನು ದುರುಪಯೋಗ ಪಡಿಸಿಕೊಂಡವರು ಇದ್ದಾರೆ. ಆದರೆ ಆನೆ ನಡೆದದ್ದೆ ಹಾದಿಯೆಂಬಂತೆ ಶಿವಣ್ಣನ ತಾರಾ ವರ್ಚಸ್ಸು ಸ್ವಲ್ಪವು ಕಡಿಮೆಯಾಗಿಲ್ಲ.
ನಾವು ನಾಲ್ಕು ದಶಕಗಳ ಹಿಂದೆ ಹೋಗೋಣ. ಅದು ರಾಜ್ಕುಮಾರ್ರವರ ನೂರನೇ ಸಿನಿಮಾ ‘ಭಾಗ್ಯದ ಬಾಗಿಲು’ ಬಿಡುಗಡೆಯ ಸಮಯ. ಆ ಸಂತೋಷವನ್ನು ಹಂಚಿಕೊಳ್ಳಲು ಆಗ ಕನ್ನಡಿಗರು ಮದ್ರಾಸಿಗೆ ಅಣ್ಣಾವ್ರ ಹುಡುಕಿಕೊಂಡು ಹೋಗಬೇಕಿತ್ತು. ಈ ಮೂರ್ನಾಲ್ಕು ದಶಕಗಳಲ್ಲಿ ನಾವೆಷ್ಟು ಸಾಧಿಸಿದ್ದೇವೆ, ಬೆಳೆದಿದ್ದೇವೆಂದು ಅನಿಸುವುದಿಲ್ಲವೆ. ನಿಜಕ್ಕೂ ಇಂದು ಕನ್ನಡ ಚಿತ್ರರಂಗ ಬೆಳೆಯುತ್ತ ಸ್ವತಂತ್ರವಾಗಿ ನೆಲೆನಿಂತಿದೆ. ಕೇವಲ 2-3 ಲಕ್ಷದಲ್ಲಿ ಸಿನಿಮಾ ಮಗಿಸಿ 10 ಲಕ್ಷ ಲಾಭ ಮಾಡುವ ಕಾಲ ಮುಗಿದಿದೆ. ಈಗೇನಿದ್ದರೂ ಕೋಟಿ ಲೆಕ್ಕಚಾರ. ಜೋಗಿ, ಮುಂಗಾರು ಮಳೆ, ಜಾಕಿ ಯಂತಹ ಸಿನಿಮಾಗಳು ಯಶಸ್ಸನ್ನು ಕಂಡು ಅಕ್ಕಪಕ್ಕದ ರಾಜ್ಯಗಳು ಕನ್ನಡ ಚಿತ್ರರಂಗದ ಎಳ್ಗೆಯನ್ನು ಕಂಡು ನಿಬ್ಬೆರಗಾಗಿವೆ. ಇನ್ನೂ ನಮ್ಮ ಚಿತ್ರರಂಗದ ಮಾರುಕಟ್ಟೆ ಯನ್ನು ಶಪಿಸುವುದನ್ನು ಬಿಟ್ಟು ಹೊಸ ಮನ್ವಂತರಕ್ಕೆ ಹೆಜ್ಜೆಯಿಡಬೇಕಾಗಿದೆ.
ಶಿವಣ್ಣ ಈ 48ರ ಹರೆಯದಲ್ಲೂ 25ರ ಹುಡುಗರಂತೆ ಕುಣಿಯಬಲ್ಲರು. ಭಾರತದ ಸಿನಿಮಾ ದಿಗ್ಗಜರಿಗೆ ಸರಿ ಸಮಾನರಾಗಿ ಅಭಿನಯಿಸಬಲ್ಲರು. ಹೊರಗಿನವರು ಶಿವಣ್ಣ ಸಿನಿಮಾ ನೋಡಿ, ಯಾಕೆ ಇವರು ಕರ್ನಾಟಕಕ್ಕೆ ಮಾತ್ರ ಸೀಮಿತ. ಅವರಲ್ಲಿ ಎಂತಹ ಪ್ರತಿಭೆಯಿದೆ, ತಮಿಳು-ತೆಲುಗಿನಲ್ಲಿಯೂ ಇವರ ಸಿನಿಮಾ ನೋಡುವಂತಾಗಬೇಕು ಎಂದು ಹೊಗಳಿದ್ದಾರೆ. ಕರ್ನಾಟಕದ ಜನತೆ ಕೂಡ ಉತ್ತಮ ಸಿನಿಮಾ ಬಂದರೆ ಖಂಡಿತಾ ನೋಡದೆ ಬಿಡುವುದಿಲ್ಲ ಎಂಬುದನ್ನು ಖಚಿತಪಡಿಸಿದ್ದಾರೆ. ಹಾಗಾಗಿ ನಮ್ಮ ನಿರ್ದೇಶಕ-ನಿರ್ಮಾಪಕರು ಶಿವಣ್ಣನನ್ನು ರಾಷ್ಟ್ರ-ಅಂತರಾಷ್ಠ್ರೀಯ ಮಟ್ಟಕ್ಕೆ ಕೊಂಡೊಯ್ಯುವಂತಹ ಪ್ರಯತ್ನ ನಡೆಯಬೇಕು. ಜಾಕಿ ತೆಲುಗಿಗೆ ಡಬ್ ಆಗುವಂತೆ ಶಿವಣ್ಣನ ಸಿನಿಮಾಗಳು ಮೂರ್ನಾಲ್ಕು ಭಾಷೆಯಲ್ಲಿ ಬಿಡುಗಡೆಗೊಳಿಸುಂತಹ 20-30 ಕೋಟಿವೆಚ್ಚದಲ್ಲಿ ಸಿನಿಮಾ ನಿರ್ಮಿಸುವಂತಹ ನಿರ್ದೇಶಕ-ನಿರ್ಮಾಪಕರು ಸಿಗಬೇಕು. ಕನ್ನಡ ಚಿತ್ರರಂಗ ಇನ್ನೀತರ ಭಾಷಗಳ ಸಿನಿಮಾ ಪೈಪೋಟಿಯನ್ನು ಸಮರ್ಥವಾಗಿ ಎದುರಿಸಲು ನಮ್ಮ ಚಿತ್ರರಂಗ ಒಂದಾಗಬೇಕು. ಶಿವಣ್ಣನ 25 ವರ್ಷಕ್ಕೆ ಕೊಡುಗೆಯಾಗಿ ನಾವು ಅವರ ಸಿನಿಮಾಗಳನ್ನು ಹೆಚ್ಚು ಹೆಚ್ಚಾಗಿ ನೋಡೋಣ. ಶಿವಣ್ಣನ ಸಿನಿಮಾಗಳ ಮಾರುಕಟ್ಟೆ ಇನ್ನಷ್ಟು ಎತ್ತರಕ್ಕೆ ಬೆಳೆದು ಮುಂದೆ ಅವರಿಗೆ ನೂರು ಕೋಟಿ ಬಜೆಟ್ ಹಾಕುವ ಸಿನಮಾ ನಿರ್ಮಾಪಕನನ್ನು ಅಭಿನಂದಿಸುವ ಕಾಲ ಕೆಲವೇ ವರ್ಷದಲ್ಲಿ ಬರಲಿ ಎಂದು ನಾವೆಲ್ಲರೂ ಆಶಿಸೋಣ.

