ಸುದೀಪ್ ಈಗ ವರದನಾಯಕ
published on Nov.09, 2011, under News
ತಮಿಳಿನಿಂದ ಕರೆತಂದಿದ್ದ `ಸಿಂಗಂ’ ಇಲ್ಲಿ `ಕೆಂಪೇಗೌಡ’ನಾಗಿ ಮಿಂಚಿದ್ದು ಈಗ ಇತಿಹಾಸ. ಒಂದು ಚಿತ್ರ ಹಿಟ್ ಆದೊಡನೆ ಅದೇ ರೀತಿಯ ಸಬ್ಜೆಕ್ಟ್ ಆರಿಸಿಕೊಂಡು ಸಿನಿಮಾ ಮಾಡುವುದು ನಿರ್ಮಾಪಕರ ವಾಡಿಕೆ. ಹೀಗಾಗಿ `ಕೆಂಪೇಗೌಡ’ ನಿರ್ಮಿಸಿದ್ದ ಶಂಕರ್ಗೌಡ ಒಂದಷ್ಟು ಆ್ಯಕ್ಷನ್ ಪ್ಯಾಕ್ಡ್ ಸಿನಿಮಾಗಳನ್ನು ದಂಡಿಯಾಗಿ ಖರೀದಿ ಮಾಡಿಟ್ಟುಕೊಂಡಿದ್ದಾರೆ. ಅವೆಲ್ಲಾ ಚಿತ್ರಗಳಿಗೂ ಸುದೀಪನೇ ನಾಯಕ ಅನ್ನೋದು ಶಂಕರ್ ಮಾತು. ಇಷ್ಟಕ್ಕೂ ಸುದೀಪ್ ಇತ್ತೀಚೆಗೆ ಒಂದೆಡೆ ನಿಲ್ಲುತ್ತಿಲ್ಲ. ಒಂದು ವಾರ ಬಾಲಿವುಡ್, ಮತ್ತೊಂದು ವಾರ ಟಾಲಿವುಡ್… ಅದಾದ ನಂತರ ಸ್ಯಾಂಡಲ್ವುಡ್. ಹೀಗೆ ಒಂದು ತಿಂಗಳಲ್ಲಿ ಕೇವಲ 10-15 ದಿನ ಮಾತ್ರ ಕನ್ನಡದ ನಿರ್ಮಾಪಕರಿಗೆ ಸುದೀಪ್ ಕಾಲ್ಶೀಟ್. ಸದ್ಯ ತೆಲುಗಿನಲ್ಲಿ `ಈಗ’ ಶೂಟಿಂಗ್ ಮುಗಿಸಿ ಬಂದಿದ್ದಾರೆ. ಬಹುದಿನಗಳಿಂದ ಬಾಕಿ ಉಳಿದಿರುವ `ವರದ ನಾಯಕ’ನ ಚಿತ್ರೀಕರಣ ಮತ್ತೆ ಶುರುಮಾಡಬೇಕಿದೆ. ಪ್ರಾರಂಭದಲ್ಲಿ ಒಂದು ವಾರದ ಮಟ್ಟಿಗೆ ಈ ಚಿತ್ರಕ್ಕೆ ಕೆಲಸ ಮಾಡಿದ್ದು ಬಿಟ್ಟರೆ ಉಳಿದ ಸಮಯವೆಲ್ಲಾ ಟಾಲಿವುಡ್ ಹಾಗೂ ಕ್ರಿಕೆಟ್ಗೆ ಮೀಸಲು. ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಕೂಡ ಮತ್ತೊಬ್ಬ ನಾಯಕನಾಗಿರುವುದರಿಂದ ಚಿರು ನಟನೆಯ ಭಾಗವನ್ನು ಚಿತ್ರಿಸಿಕೊಂಡಿದೆ ಚಿತ್ರತಂಡ. ವಿಶೇಷವೆಂದರೆ ಮಧ್ಯಂತರದ ಭಾಗವನ್ನೇ 22 ದಿನ ಚಿತ್ರೀಕರಿಸಲಾಗಿದೆಯಂತೆ. ಸುದೀಪ್ ಅಭಿನಯದ ಚಿತ್ರಗಳಲ್ಲಿ ಅತಿ ಹೆಚ್ಚು ದಿನ ಶೂಟಿಂಗ್ ಮಾಡಿದ ಸಿನಿಮಾ ಇದಾಗಲಿದೆ ಅನ್ನೋದು ಚಿತ್ರತಂಡದ ಆಂಬೋಣ.
ನಾಲ್ಕು ವರ್ಷಗಳ ಹಿಂದೆ ತೆಲುಗಿನಲ್ಲಿ ತೆರೆಕಂಡಿದ್ದ ಲಕ್ಷ್ಯಂ ಚಿತ್ರದ ಅವತರಿಣಿಕೆಯೇ `ವರದ ನಾಯಕ’. ಮೂಲ ಚಿತ್ರದಲ್ಲಿ ಗೋಪಿಚಂದ್, ಜಗಪತಿ ಬಾಬು, ಅನುಷ್ಕಾ ಮತ್ತಿತರರು ನಟಿಸಿದ್ದರು. ಮೂಲ ಚಿತ್ರಕ್ಕೆ ಧಕ್ಕೆಯಾಗದಂತೆ ಒಂದಷ್ಟು ಬದಲಾವಣೆಯೊಂದಿಗೆ ಆ್ಯಕ್ಷನ್ – ಕಟ್ ಹೇಳುತ್ತಿದ್ದಾರೆ ಅಯ್ಯಪ್ಪ . ರವಿಚಂದ್ರನ್ ಜೊತೆ `ನರಸಿಂಹ’ದಲ್ಲಿ ಹಾಟ್ – ಹಾಟ್ ಆಗಿ ಕಾಣಿಸಿಕೊಂಡಿದ್ದ ನಿಖಿಶಾ ಪಟೇಲ್ ಸುದೀಪ್ ಜೊತೆ ಹೆಜ್ಜೆ ಹಾಕಿದ್ದಾಳೆ. ರವಿ ಜೊತೆ ಮೈ ಚಳಿ ಬಿಟ್ಟು ಕುಣಿದಿದ್ದ ನಿಖಿಶಾ ಇಲ್ಲಿ ಯಾವ ರೀತಿ ಕಾಣಿಸಿಕೊಳ್ಳುತ್ತಿದ್ದಾಳೆ ಅನ್ನೋದು ಸದ್ಯಕ್ಕೆ ಸಸ್ಪೆನ್ಸ್.
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ `ರಾಜ್ ಕಪ್’ ವೇಳೆ ಶಿವರಾಜ್ಕುಮಾರ್ ತಂಡದೊಂದಿಗೆ ಮಾತಿನ ಚಕಮಕಿಗಿಳಿದಿದ್ದ ಸುದೀಪ್, ಅಲ್ಲಿ ನಡೆದ ಘಟನೆಗೆ ಸ್ಪಷ್ಟನೆ ನೀಡಿದರು. `ಅಷ್ಟಕ್ಕೂ ಮಾಧ್ಯಮದಲ್ಲಿ ಪ್ರಕಟವಾದಂತೆ ಅಲ್ಲೇನು ನಡೇದೇ ಇಲ್ಲ. ಸಣ್ಣ ಮನಸ್ತಾಪವಷ್ಟೇ. ಇದಕ್ಕೆ ಯಾರೂ ಹೊಣೆಯಲ್ಲ. ಶಿವಣ್ಣನ ಏನೂ ಮಾಡೇ ಇಲ್ಲ. ಅವರ ಕೈವಾಡವೂ ಇಲ್ಲ. ನಮ್ಮಿಬ್ಬರ ಮಧ್ಯ ಇರುವವರಿಂದಲೇ ಇದು ನಡೆದಿದೆ. ದೊಡ್ಡವರ ಹೆಸರನ್ನು ಅವರೆಲ್ಲಾ ಕವಚದಂತೆ ಬಳಸಿಕೊಳ್ಳುತ್ತಿದ್ದಾರೆ. ಮೊದಲ ಪಂದ್ಯ ಸೋಲುತ್ತಿದ್ದಂತೆಯೇ ನಾನು ವಾಪಾಸಾಗಿದ್ದೆ. ಯಾರೂ ಇಲ್ಲ ಬನ್ನಿ ಅಂತ ಕರೆದ್ರು ಹೀಗಾಗಿ ವಾಪಾಸ್ ಬಂದೆ. ಹೇಗಾದರು ಗೆಲ್ಲಲೇಬೇಕು ಅಂತ ಅಂದುಕೊಂಡವರ ಮಧ್ಯೆ ಆಡೋದು ಕಷ್ಟ. ಅಲ್ಲೇನಾಯ್ತು, ಒಳಗೆ ಏನೇನು ನಡೆದಿದೆ ಎಂಬುದನ್ನು ಗೀತಕ್ಕ ಹಾಗೂ ಶಿವಣ್ಣನಿಗೆ ವಿವರಿಸಿದ್ದೇನೆ. ನಮ್ಮಿಬ್ಬರ ಮಧ್ಯೆ ಯಾವುದೇ ಮನಸ್ತಾಪವಿಲ್ಲ. ಅವರ ಸಿನಿಮಾವನ್ನು ಡೈರೆಕ್ಟ್ ಮಾಡೇ ಮಾಡ್ತೀನಿ…’ ಎಂದು ವಿವಾದಕ್ಕೆ ಮಂಗಳ ಹಾಡಿದರು.

